Wednesday, December 8, 2010

ಜಾಗತೀಕರಣ ಸಂದರ್ಭದಲ್ಲಿ ಇತ್ತೀಚಿನ ಕನ್ನಡ ಸಾಹಿತ್ಯದ ಧೋರಣೆಗಳು





ಜಾಗತೀಕರಣಗೊಂಡ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಗಮನಿಸುವಾಗ ಹಲವಾರು ಮಹತ್ವದ ಸ್ಥಿತ್ಯಂತರಗಳು ಎದ್ದುಕಾಣುತ್ತವೆ. ಕುವೆಂಪು; ಬೇಂದ್ರೆ. ಗೋಕಾಕರಿಂದ ಹಿಡಿದು ಯು.ಆರ್.ಅನಂತಮೂರ್ತಿ. ಗಿರೀಶಕಾರ್ನಾಡರವರೆಗೆ ಕನ್ನಡ ಸಾಹಿತ್ಯ ಜಾಗತೀಕರಣದ ಛಾಯೆಯನ್ನೇ ಪಡೆದುಕೊಂಡು ಮಣ್ಣಿನ ವಾಸನೆಯಿಂದ ಬೆಳೆದುಬಂದಿದೆ. ಒಂದು ಅರ್ಥದಲ್ಲಿ ಆಧುನಿಕ ಕನ್ನಡ ಸಾಹಿತ್ಯವೆಂದು ಕರೆದರೂ ಅದು ಪರ್ಯಾಯವಾಗಿ ಜಾಗತೀಕರಣಗೊಂಡ ಕನ್ನಡ ಸಾಹಿತ್ಯವೆ ಸರಿ. ಐವತ್ತು ವರ್ಷಗಳ ಈ ಕನ್ನಡ ಸಾಹಿತ್ಯ ಹಲವು ಪ್ರಮುಖ-ಅಪ್ರಮುಖ ಸಾಹಿತ್ಯದಾರಿಗಳನ್ನು ಮಾಡಿಕೊಂಡು ಹುಟ್ಟಿಕೊಂಡಿತು. ಇದೊಂದು ನಿರಂತರ ಪ್ರಯೋಗಗಳ ಚಟುವಟಿಕೆಯ ಕಾಲವಾಗಿ ಪರಿಗಣಿಸಲ್ಪಟ್ಟಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಜಾಗತೀಕರಣದಿಂದ ಕನ್ನಡ ಸಾಹಿತ್ಯ ಸೊರಗುತ್ತದೆಂಬ ಇತ್ತೀಚಿನ ಕೂಗು ತನ್ನ ಅರ್ಥವನ್ನು ಕಳೆದುಕೊಂಡು ಕಾಲದಿಂದ ಕಾಲಕ್ಕೆ ಜಾಗೃತಗೊಂಡು ಇನ್ನಷ್ಟು ಮತ್ತಷ್ಟೂ ಬೆಳೆದು ಸಂಮೃದ್ಧ ಸಾಹಿತ್ಯವಾಗಿ ಬೆಳೆಯಲು ಕಾರಣವಾಗಿದೆ.
ಜಾಗತೀಕರಣದ ಬದಲಾವಣೆಯಿಂದ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲಿ ಆದ ಬದಲಾಣೆಯನ್ನು ಪಾಶ್ಚಾತ್ಯ ಜೀವನ ಶೈಲಿಯಿಂದ ಪಡೆದುಕೊಳ್ಳಬೇಕಾಯಿತು. ಈ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸಿದ ಸಮಾಜ ನವಜೀವನದ ಧೋರಣೆಯನ್ನೇ ಅನುಭವಿಸಿ ಪಾಶ್ಚಾತ್ಯ ಶೈಲಿಯನ್ನು ಕನ್ನಡಕ್ಕೆ ಅಳವಡಿಸಿಕೊಂಡಿತ್ತು. ಇದನ್ನೇ ನಾವು ”ಒoಜeಡಿಟಿ ಖಿhiಟಿಞ ಖಿಚಿಟಿಞ” ಎಂಬ ವಾದದ ಮೂಲಕ ಕನ್ನಡ ಸಾಹಿತ್ಯವೂ ಹೊಸ ಹೊಸ ವಿಚಾರಗಳಿಂದ ಪರಂಪರಾಗತವಾದ ಜೀವನ ಮೌಲ್ಯಗಳನ್ನು ಪರಿವರ್ತಿಸುವ, ಪುನಃ ಸೃಷ್ಟಿಸುವ ಕಾರ್ಯಕ್ಕೆ ಕತೃವಾದವರು ವಿ.ಕೃ. ಗೋಕಾಕ, ಮತ್ತು ಗೋಪಾಲಕೃಷ್ಣ ಅಡಿಗರು. ಇವರಿಂದ ಪ್ರಾರಂಭಗೊಂಡ ಕನ್ನಡ ಪರಂಪರೆ ಜಾಗತೀಕರಣದ ಕನ್ನಡ ಸಾಹಿತ್ಯದ ರೂಪವಾಗಿ ಬೆಳೆಯಿತು.
ಜಾಗತೀಕರಣ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಒಂದು ಗಟ್ಟಿ ಪರಂಪರೆ ಅನೇಕ ಆ ತಲೆಮಾರಿನ ಹಿರಿಕಿರಿಯ ಸಾಹಿತಿಗಳ ಮಾಗದರ್ಶನದಿಂದ ಕನ್ನಡ ಸಾಹಿತ್ಯವನ್ನು ಬಿತ್ತಿಬೆಳೆದು ಸಂಮೃದ್ಧಿಯ ಬೆಳಯನ್ನು ತೆಗೆಯಲು ಕಾರಣರಾದರು. ಕನ್ನಡ ಸಾಹಿತ್ಯ ನವ್ಯತೆಯತ್ತ ದಾಪುಗಾಲು ಹಾಕಿತು. ಕನ್ನಡ ಕಾವ್ಯ ಪಂಪನಿಂದ ಇಂದಿನವರೆಗೂ ಹಲವಾರು ರೂಪಗಳನ್ನು ಪಡೆದುಕೊಂಡು ಪ್ರಯೋಗಗೊಂಡು, ನವೋದಯ, ನವ್ಯ, ನವ್ಯೇತ್ತರ, ದಲಿತ ಬಂಡಾಯದಂತಹ ಸಾಹಿತ್ಯ ಪ್ರಕಾರಗಳು ಹುಟ್ಟಿಬಂದವು, ಇವೆ ಕನ್ನಡ ಸಾಹಿತ್ಯ ರೂಪಗಳೂ ಜಾಗತೀಕರಣಗೊಂಡು ಹೊಸ ಹೊಸ ಪ್ರಯೋಗಕ್ಕೆ ನಾಂದಿಯಾಯಿತು, ಜಗತ್ತಿನ ಇತರ ಭಾಷೆಗಳ ಸಾಹಿತ್ಯದಲ್ಲಿ ಇದೆ ತೆರನಾದ ಬದಲಾವಣೆಗಳಾದವು, ಹಾಗೆಯೇ ಕನ್ನಡ ಸಾಹಿತ್ಯದಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿತು, ಕನ್ನಡದ ನವ್ಯತೆ ಪಾಶ್ಚತ್ಯರ ಧೋರಣೆಯ ಫಲಶೃತಿಯಾಗಿಯೇ ಬಂದದ್ದು, ಟಿ.ಎಸ್. ಎಲಿಯಟ್‌ನ, ವೇಸ್ಟ್ ಲ್ಯಾಂಡ್‌ದಂತಹ ಕಾವ್ಯ ಹಾಗೂ ವಿಮರ್ಶೆಯ ವಿಚಾರಗಳು ಜಗತ್ತಿನ ಸಾಹಿತ್ಯದ ದಿಕ್ಕನ್ನೇ ಬದಲಿಸಿದಂತೆ ನವ್ಯ ಪ್ರಯೋಗಗಳು ಕನ್ನಡ ಸಾಹಿತ್ಯ ತನ್ನ ಗರ್ಭದಲ್ಲಿ ಕರಗಿಸಿಕೊಂಡು ಮಾದರಿಯಾಗಿ ಬೆಳೆಯಿತು. ಕನ್ನಡ ಸಾಹಿತ್ಯಕ್ಕೆ ಜಾಗತೀಕರಣವೆಂಬುದು ಇಂದು ನಿನ್ನೆಯದಲ್ಲ, ಅದು ಪಂಪ, ರನ್ನರ ಕಾಲದಿಂದಲೂ ನಡೆದುಬಂದ ವಿಚಾರ. ಸಂಸ್ಕೃತದಿಂದ ಪ್ರಭಾವಿತನಾದ ಪಂಪ ಕನ್ನಡದಲ್ಲಿ ಆ ಸಾಹಿತ್ಯದ ರೂಪಗಳನ್ನು ತರಲು ಪ್ರಯತ್ನಿಸಿ ಯಶಸ್ವಿಯಾದ, ಪಂಪನ ಕಾಲದಲ್ಲಿ ಕನ್ನಡದ ಜಾಗತೀಕರಣ ಇಂದಿಗೂ ಅದು ಹೊಸ ಹೊಸ ಆಯಾಮಗಳನ್ನು ಪಡೆದು ಮತ್ತಷ್ಟು ಶ್ರೀಮಂತವಾಗಿದೆ.
ಕನ್ನಡ ಸಾಹಿತ್ಯವನ್ನು ಗಮನಿಸುವಾಗ ಮುಖ್ಯವಾಗಿ ಕನ್ನಡಿಗರಿಗೆ ಪಾಶ್ಚಾತ್ಯರ ಪ್ರಭಾವದಿಂದ ಪ್ರೇರಿತರಾಗಿ ಸಾಹಿತ್ಯದ ಲಕ್ಷಣಗಳನ್ನು ನಮ್ಮಲ್ಲಿಯೂ ಬದಲಾವಣೆ ತರಲು ಪ್ರಯತ್ನಿಸಿದರ ಫಲವೇ ಹೊಸ ಲಕ್ಷಣಗಳನ್ನು ಪಡೆಯಬೇಕಾಯಿತು, ಪಾಶ್ಚಾತ್ಯ ದೇಶಗಳಲ್ಲಿ ಮುಖ್ಯವಾಗಿ, ಇಂಗ್ಲೆಂಡಿನಲ್ಲಿ ಈ ಶತಮಾನದ ಪ್ರಾರಂಭದಿಂದಲೇ ನವ್ಯತೆಯ ಲಕ್ಷಣಗಳು ಗೋಚರಿಸಲು ಕಾರಣವಾಯಿತು. ವೈಚಾರಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಅಲೆಯೇ ಶುರುವಾಯಿತು. ಡಾರ್ವಿನ್ನರ ವಿಕಾಸವಾದ, ಮಾರ್ಕ್ಸ್‌ನ ಆರ್ಥಿಕ ಸಿದ್ಧಾಂತ ಹಾಗೂ ಫ್ರಾಯಿಡನ ಮನೋವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಂಡ ನಮ್ಮವರು ಕನ್ನಡ ಸಾಹಿತ್ಯದಲ್ಲಿ ಅಂಥಹ ವಿಚಾರಗಳು ದಾಖಲಿಸುವುದಕ್ಕೆ ಪ್ರಯತ್ನಿಸಿದರು, ಪರಂಪರಾಗತವಾದ ಜೀವನ ಮೌಲ್ಯಗಳಿಗೆ ಆಹ್ವಾನವನ್ನೊಡ್ಡಿ ಹೊಸ ಸಾಮಾಜಿಕ ಸಂಘರ್ಷಗಳನ್ನು ಹುಟ್ಟು ಹಾಕಿದರು, ಇದರಿಂದ ಹಳೆಯ ಸಾಮಾಜಿಕ ವ್ಯವಸ್ಧೆ ಕೊನೆಗೊಂಡು ಅಧುನಿಕ ಯಂತ್ರನಾಗರಿಕತೆಗೆ ಮಾರುಹೋಗಬೇಕಾಯಿತು, ಇದೇ ಲಕ್ಷಣಗಳು ಸಾಹಿತ್ಯ ಪ್ರಕಾರಗಳಲ್ಲಿ ಬಂದವು. ಮಾನವನು ಜೀವನದ ಸಹಜತೆಯನ್ನು ಕಳೆದುಕೊಂಡು ಯಾಂತ್ರಿಕನಾದ. ಹಾಲೋಮನ್; ಹಾಗೂ, ವೇಸ್ಟಲ್ಯಾಂಡ್. ಕವಿತೆಗಳಲ್ಲಿ ಅನನ್ಯತೆಯ ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ಇದರಂತೆ ಕನ್ನಡ ಸಾಹಿತ್ಯವೂ ಹೊರಗುಳಿಯಲಿಲ್ಲ. ನವ್ಯ ತಂತ್ರಗಳನ್ನು ಪ್ರಚುರಪಡಿಸಿದ ಕೀರ್ತಿ ಎಲಿಯಟನ ಕಾವ್ಯಕ್ಕಿದೆ ರೋಮಾಂಟ್ಯಿಕ್ ಕಾವ್ಯದ ಸರಳ ಅಭಿವ್ಯಕ್ತಿ ಮಾರ್ಗವನ್ನು ಬಿಟ್ಟು ಐತಿಹಾಸಿಕ ಪ್ರಜ್ಞೆಯ ದಾರಿಯಲ್ಲಿ ಜಗತ್ತಿನ ಸಾಹಿತ್ಯವೂ ಸಹ ಪುನಃಸೃಷ್ಟಿಯನ್ನು ಪಡೆದುಕೊಂಡಿತು. ಒಂದು ರೀಯಲ್ಲಿ ಇಡೀ ಜಗತ್ತೇ ಸಾಹಿತ್ಯದ ಜಾಗತೀಕರಣವಾಯಿತು. ನವ್ಯಮಾರ್ಗದ ಹರಿಕಾರರಾಗಿ ವಿ.ಕೃ.ಗೋಕಾಕರು ಕಾಣುತ್ತಾರೆ. ೧೯೫೧ರ ಮುಂಬಯಿ ಸಾಹಿತ್ಯ ಸಮ್ಮೇಳನದಲ್ಲಿ ”ಕನ್ನಡ ಕೂಡಾ ನವ್ಯಮಾರ್ಗ” ಹಿಡಿದು ಸಾಗಬೇಕಾದ ಅನಿವಾರ್ಯತೆಗೆ ಒತ್ತುಕೊಟ್ಟರು. ಆಧುನಿಕ-ಸಾಹಿತ್ಯ ಸಹಜ ಹಾಗೂ ಅನಿವಾರ್ಯ ಬೆಳವಣಿಗೆಯೆಂದು ಅಭಿಪ್ರಾಯ ಪಟ್ಟರು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಬದಲಾವಣೆಗೆ ಪ್ರೇರಕ ಶಕ್ತಿಯನ್ನು ನೀಡಿದ್ದು ಜಾಗತೀಕರಣ. ಗೋಕಾಕರ ಕಾವ್ಯ. "ಸಮುದ್ರ ಗೀತೆಗಳಲ್ಲಿ" ಇಂತಹ ನವ್ಯತೆಯ ಲಕ್ಷಣಗಳು ಎದ್ದು ಕಾಣುತ್ತವೆ.
ಜಾಗತೀಕರಣಗೊಂಡ ಕನ್ನಡ ನವ್ಯಕಾವ್ಯಕ್ಕೆ ಗೋಪಾಲಕೃಷ್ಣ ಅಡಿಗರ ಸೇವೆಗೆ ಎತ್ತರದ ಸ್ಧಾನವಿದೆ. ನವೋದಯ ಕಾವ್ಯಧೋರಣೆಯಲ್ಲಿ ಕಾವ್ಯ ರಚನೆ ಪ್ರಾರಂಭಿಸಿದ ಇವರು "ಚಂಡಮದ್ದಳೆ", "ಭೂಮಿಗೀತ", "ವರ್ಧಮಾನ" ಆ ಕಾಲದ ನವ್ಯಕಾವ್ಯ ಸಂಗ್ರಹಗಳಾದರೂ ಇಂದಿಗೂ ಅವು ಹೊಸ ವಿಚಾರಗಳನ್ನು ನೀಡುತ್ತವೆ. ಕನ್ನಡದಲ್ಲಿ "ನವ್ಯಕಾವ್ಯ" ಆಧುನಿಕತೆ. ಜಾಗತೀಕರಣ ರೂಪದಲ್ಲಿ ಹೊರಹೊಮ್ಮುವುದು ಐತಿಹಾಸಿಕ ಅವಶ್ಯಕತೆಯೂ ಆಗಿತ್ತು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಮೋಡವಾಗಿ ಮೇಲೆದ್ದ ಮನಸ್ಸು ಮಳೆಯಾಗಿ ಮತ್ತೆ ಹಳ್ಳಕೊಳ್ಳಗಳಲ್ಲಿ ತುಂಬಿ ತಳದಲ್ಲಿ ಕೂಡಿದ್ದ ಕೊಳೆಕೆಸರುರಾಡಿಯಲ್ಲಾ ಮೇಲೆದ್ದು ಬಂದು ಕನ್ನಡಿಯಂತಹ ತಿಳಿನೀರು ನಿಂತಿದೆ. ಹೊಸ ತಲೆಮಾರಿನ ಜನಾಂಗದ ಜಾಣತನವೇ ಸರಿ. ಆಧುನಿಕ ಜೀವಂತ ಜನಾಂಗದ ಸಂವೇದನೆಗಳು ಅಭಿವ್ಯಕ್ತಗೊಳಿಸಿದ ರೀತಿ ಅನನ್ಯವಾದದ್ದು. ನವೋದಯ ಕಾಲದ ಕವಿಗಳು ಹೊಸ ಪ್ರತಿಮೆ, ರೂಪಕ. ಪ್ರತೀಕ, ಸಂಕೇತಗಳ ನವ್ಯತಂತ್ರವೊಂದನ್ನು ಪ್ರಯೋಗದಲ್ಲಿ ತಂದರು. ಇದರಿಂದ ಕನ್ನಡ ಕಾವ್ಯ ಗಟ್ಟಿಗೊಂಡು ನಿಲ್ಲಲು ಕಾರಣವಾಯಿತು. ಬದಲಾವಣೆಯ ಧೋರಣೆ ”ಸಾವಯವ ಸಾಮಗ್ರೀಕರಣ”ವೇ ಇಂದಿನ "ಸಾವಯವ ಜಾಗತೀಕರಣ” ರೂಪ ಪಡೆದುಕೊಂಡಿದೆ. ಸಮಕಾಲಿನ ಪ್ರಜ್ಞೆ ಸಾವಯದ ಸಾಮಗ್ರೀಕರಣವನ್ನು ಪಡೆದುಕೊಂಡು ಗೋಕಾಕ ಅಡಿಗರ ಕಾವ್ಯ ಯಶಸ್ಸಿಗೆ ಕಾರಣವಾಗಿದೆ.
ನವ್ಯ ಕವಿಗಳೆಂದು ಹೆಸರಾದ ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್, ಶಿವರುದ್ರಪ್ಪ, ಚನ್ನವೀರ ಕಣವಿಯಂತಹ ಕವಿಗಳು ನವೋದಯ ಕಾವ್ಯದ ಧೋರಣೆಯಲ್ಲಿ ಜಾಗತೀಕರಣಗೊಂಡರು. ಇವರು ನವೋದಯ, ನವ್ಯ ಧೋರಣೆಯನ್ನು ಸಮನ್ವಯಗೊಳಿಸುವ ದಿಶೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಇವರನ್ನು ಸಮನ್ವಯ ಪಂಥದವರೆಂದು ಕರೆಯಲಾಯಿತು. ಇವರ ಪ್ರಭಾವದಿಂದ ಅನೇಕ ಹಿರಿಕಿರಿಯ ಕವಿಗಳು ನವ್ಯಕಾವ್ಯ ಕೃಷಿಗೆ ಕೈಹಾಕಿದರು. ರಾಮಚಂದ್ರಶರ್ಮ, ನಿಸಾರ ಅಹ್ಮದ್, ಚಂದ್ರಶೇಖರ ಕಂಬಾರ, ಪಿ.ಲಂಕೇಶ
ಯು.ಆರ್, ಅನಂತಮೂರ್ತಿ, ಗಿರೀಶಕಾರ್ನಾಡ್‌ರ ಕಾವ್ಯದಲ್ಲಿ ಎಂತೋ ಕಾದಂಬರಿ, ನಾಟಕ, ಸಣ್ಣಕತೆ ಮೊದಲಾದ ಗದ್ಯ ಪ್ರಾಕಾರಗಳಲ್ಲಿಯೂ ಆಧುನಿಕತೆಯ ಜಾಗತೀಕರಣವಾಯಿತು.
ಜಾಗತೀಕರಣವು ಕಾಲದಿಂದ ಕಾಲಕ್ಕೆ ಭಿನ್ನತೆಯ ರೂಪವನ್ನು ಪಡೆದುಕೊಂಡು ಅದು ನವೋದಯ, ನವ್ಯ, ಆಧುನಿಕ, ದಲಿತ, ಬಂಡಾಯದಂತಹ ಧೋರಣೆಯ ಮೌಲ್ಯಗಳನ್ನು ರೂಪಿಸುತ್ತಾ ಬೆಳೆದದ್ದು ಕನ್ನಡ ಸಾಹಿತ್ಯದ ಇತಿಹಾಸ, ಸಮಕಾಲಿನ ರಾಜಕೀಯ, ಆಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆಯಾದವು,
ಯುವಜನಾಂಗದ ಕವಿಗಳು ಇದರಿಂದ ಪ್ರೇರಿತರಾಗಿ ಬಂಡಾಯ ಧೋರಣೆಯ ಮೂಲಕ ನವ್ಯಕಾವ್ಯ ಜಾತಿವರ್ಣವ್ಯಸ್ಧೆಯನ್ನು ತೊಡೆದು ಹಾಕುವ ಮೂಲಕ ಕನ್ನಡ ಕಾವ್ಯ ಸಾಹಿತ್ಯದಲ್ಲಿ ಪ್ರಬಲ ಆಂದೋಲನಗಳಾಗಿ ರೂಪುಗೊಂಡವು. ಬಂಡಾಯ ಹಾಗೂ ದಲಿತ ಧೋರಣೆಗಳಿಗೆ ಆಧುನಿಕ ಸಮಾಜದಲ್ಲಿ ನಡೆಯುತ್ತಿರುವ ವರ್ಣವ್ಯವಸ್ಧೆಯ ಸಂಘರ್ಷ ಹಾಗೂ ಜಾತಿ ಸಂಘರ್ಷಗಳೇ ಕಾರಣವಾದವು. ಇಂದು ದಲಿತರು ಮತ್ತು ಜಾಗತೀಕರಣಯೆನ್ನುವ ಚಿಂತನೆಯಲ್ಲಿ ಡಾ||ಮೊಗಳ್ಳಿ ಗಣೇಶರು ಹೊಸ ಹೊಸ ವಿಚಾರದತ್ತ ಸಾಹಿತ್ಯವನ್ನು ತಲುಪಿಸುತ್ತಿದ್ದಾರೆ. ಜಾಗತೀಕರಣದ ಬಗ್ಗೆ ಅನೇಕರು ವಿವಿಧ ನೆಲೆಯಿಂದ ಚಿಂತಿಸಲು ಆರಂಭಿಸಿದ್ದಾರೆ. ಆದಿವಾಸಿಗಳು ಮತ್ತು ಅಲ್ಪಸಂಖ್ಯಾತ ಜನಾಂಗಗಳ ಹಾಗೂ ಮಹಿಳೆಯರ ಹಿನ್ನೆಲೆಯಲ್ಲಿ ಜಾಗತೀಕರಣವನ್ನು ಪರ ಮತ್ತು ವಿರೋಧಗಳ ಧೋರಣೆಗಳಿಂದ ನಮ್ಮ ಕನ್ನಡ ಸಾಹಿತ್ಯ ಸಾಗಿ ಬಂದಿದೆ. ಶತಮಾನಗಳಿಂದ ವರ್ಣಬೇಧ ನೀತಿಗೆ ಬಲಿಯಾಗಿ ಅಪಮಾನ, ಅತ್ಯಾಚಾರಗಳಿಗೊಳಗಾದ ನಿಗ್ರೋ ಜನಾಂಗವು ಸಿಡಿದೆದ್ದು ಬಿಳಿಯ ನಾಗರಿಕ ವ್ಯವಸ್ಥೆಯಲ್ಲಿ ಕರಿಯರಿಗೂ ಸಮಪಾಲುಬೇಕೆಂದು ಅಮೇರಿಕೆಯ ನಿಗ್ರೋ ಸಂಘಟನೆ ಸಿಡಿದೇಳಲು ಕಾರಣವಾಯಿತು. "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎನ್ನುವ ಕುವೆಂಪುರವರ ಕಾವ್ಯ ಧೋರಣೆಗೆ ಅದು ಪ್ರೇರಕಶಕ್ತಿಯಾಗಿ ಬಂದಿರಬಹುದು. ಕಪ್ಪು ಜನಾಂಗದ ಸಿಡಿದೆದ್ದ ಪ್ರಜ್ಞೆಯ ಪ್ರತಿಧ್ವನಿ ಜಗತ್ತಿನಾದ್ಯಂತ ಮೊಳಗಿ ದಬ್ಬಾಳಿಕೆಗೊಳಗಾದ ದಲಿತರಲ್ಲಿ ಹೊಸ ಸಾಮಾಜಿಕ ಆರ್ಥಿಕ-ಸಂಘರ್ಷಕ್ಕೆ ನಾಂದಿ ಹಾಡಿತು. ದಲಿತರು ಜಾಗತೀಕರಣಗೊಳ್ಳಲು ಕಾರಣವಾಯಿತು. ವರ್ತಮಾನ ಭಾರತದಲ್ಲಿ ಮಹಾರಾಷ್ಟ, ಆಂಧ್ರ, ಬಂಗಾಳದಲ್ಲಿ ದಲಿತರು ಸಂಘಟಿತ ಹೋರಾಟಕ್ಕೆ ಅಣಿಯಾದರು. ಸಾಹಿತ್ಯವು ಸಾಮಾಜಿಕ ಪರಿವರ್ತನೆಗೆ ಚಾಲನೆಯನ್ನು ಒದಗಿಸಿಕೊಟ್ಟಿತು. ಇದುವೇ ಸಾಮಾಜಿಕ ಜಾಗತೀಕರಣ, ಆರ್ಥಿಕ ಜಾಗತೀಕರಣ, ಸಾಂಸ್ಕೃತಿಕ ಜಾಗತೀಕರಣದಂತಹ ಹೊಸ ಆಯಾಮಗಳು ಬೆಳೆದುಬಂದವು. ಕರ್ನಾಟಕದ ದಲಿತವೇದಿಕೆಗೆ ಸಂಘಟಿತವಾಯಿತು. ಸಮಾಜದ ದುರ್ವ್ಯವಸ್ಥೆ ದುರಾಡಳಿತಗಳಿಗೆ ಕ್ರಿಯಾಶೀಲ ಪ್ರತಿಭಟನೆ ವ್ಯಕ್ತಪಡಿಸುವಂತಹ ಸಂಘಟನೆಗಳು ರೂಪುಗೊಂಡವು. ಕನ್ನಡ ಪರ ಚಿಂತನೆಗಳು, ಕನ್ನಡ ನೆಲ-ಜಲದ ಸಮಸ್ಯೆಗಳು ಎದುರಾದಾಗ ಒಟ್ಟಿಗೆ ಹೋರಾಟ ಮಾಡಿ ಎದುರಿಸುವ ಸಂಘಟನೆಗಳು ಸಹ ಹುಟ್ಟಿಕೊಂಡವು. ಕರ್ನಾಟಕದಲ್ಲಿ ಇತ್ತೀಚೆಗೆ ಹುಟ್ಟಿಕೊಂಡ ಸಂಘಟನೆ "ಕರವೇ" ಕರ್ನಾಟಕ ರಕ್ಷಣಾ ವೇದಿಕೆ ತನ್ನ ಹಲವಾರು ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹಿಂದಿನ ಬಂಡಾಯ ಹಾಗೂ ದಲಿತ ವೇದಿಕೆಗಳ ಪ್ರಧಾನ ಆಶಯವೂ ಇದೆ ಆಗಿದೆ. ದಲಿತ ವೇದಿಕೆ ಕೇವಲ ದಲಿತರ ಸಮಸ್ಯೆಗಳಿಗೆ ಸೀಮಿತವಾದರೆ ಬಂಡಾಯ ವೇದಿಕೆ ಇಡೀ ಸಮಾಜವನ್ನೇ ಎದುರಿಸುವ ಧೋರಣೆಯನ್ನು ಹೊಂದಿದೆ. ಈ ಧೋರಣೆಯಲ್ಲಿ ಸೃಷ್ಟಿಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಕಾವ್ಯ, ಕಥೆ, ನಾಟಕ, ಕಾದಂಬರಿ ಮತ್ತು ಇತರ ಸಾಹಿತ್ಯಗಳಲ್ಲಿ ಆಕ್ರೋಶ ಚಿತ್ಕಾರಗಳೇ ಕೇಳಿ ಬರುತ್ತಿವೆ. ಹೊಸ ಧೋರಣೆ ಮೂಡಿಬರುತ್ತಿದೆ. ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸಾರ್ಥಕತೆ ಪಡೆಯುವ ಆರೋಗ್ಯಪೂರ್ಣ ಲಕ್ಷಣಗಳು ಕನ್ನಡ ಸಾಹಿತ್ಯದ ಲೇಖಕರಲ್ಲಿ ಕಾಣಬಹುದು. ಸಾಹಿತ್ಯ ಜಾಗತೀಕರಣದ ಹೊಡೆತಕ್ಕೆ ಸೊರಗುವುದಿಲ್ಲ. ಅದು ಮತ್ತೇ ಹೊಸ ಹೊಸ ಆಯಾಮದೊಂದಿಗೆ ಬೆಳಗುತ್ತದೆ. ಕನ್ನಡ ಥಳ ಥಳ ಹೊಳೆಯುತ್ತದೆ. ಕನ್ನಡ ಕಹಳೆ ವಿಶ್ವದಾದ್ಯಂತ ಮೊಳಗುತ್ತದೆ. ಕನ್ನಡ ಕ್ಷೇತ್ರ ಪರಂಪರೆ ಯಾವ ಕಾಲಕ್ಕೂ ಮೊಂಡಾಗದು ಆಧುನಿಕ ಬದುಕಿನೊಂದಿಗೆ ತೆರೆದುಕೊಂಡು ಇನ್ನಷ್ಟೂ ವಿಶ್ವಸ್ಥವಾಗುತ್ತದೆ. ಅದು ಯಾವಾಗಲೂ ಜಾಗತೀಕರಣದ ಧೋರಣೆಗಳನ್ನು ಒಳಗೊಂಡು ಬೆಳೆಯುತ್ತದೆ, ಕನ್ನಡ ಉಳಿಯುತ್ತದೆ.

ಗೌಸುದ್ದೀನ್ ತುಮಕೂರಕರ
ಕನ್ನಡ ಉಪನ್ಯಾಸಕರು.

No comments:

Post a Comment

ಹಿಂದಿನ ಬರೆಹಗಳು